Wednesday, 14th May 2025

Ranjith H Ashwath Column: ಪ್ರತಿಪಕ್ಷದೊಳಗಿನ ಒಳಬೇಗುದಿಗೆ ಕೊನೆಯೆಂದು ?

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ರಾಜಕೀಯ ವ್ಯವಸ್ಥೆಯಲ್ಲಿ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಭಾರತದಲ್ಲಿರುವ ರಾಜಕೀಯ ವ್ಯವಸ್ಥೆಯಲ್ಲಿ ‘ಅಧಿಕಾರ’ದ ಗದ್ದುಗೆ ಏರಬೇಕೆಂದರೆ ಇನ್ನೊಬ್ಬರ ಕಾಲನ್ನು ಎಳೆದೇ ಮುಂದೆ ಹೋಗಬೇಕು ಎನ್ನುವ ಪರಿಸ್ಥಿತಿಯಿರುವುದು ಹೊಸ
ದೇನಲ್ಲ. ವಿರೋಧಪಕ್ಷಗಳಿಂದ ಎದುರಾಗುವ ಅಡೆತಡೆ ಯನ್ನು ಎದುರಿಸಿ ಮುನ್ನಡೆಯುವುದು ಒಂದು ಭಾಗ. ಆದರೆ ಪಕ್ಷದೊಳಗಿನ ವಿರೋಧಿ ಗಳನ್ನು ಮೀರಿ ನಿಲ್ಲುವುದು ಸವಾಲಿನ ಕೆಲಸ. ಈ ಸವಾಲಿನ ಕೆಲಸವನ್ನು ನಿಭಾಯಿಸುವುದಕ್ಕೆ ಹಣಬಲ, ತೋಳ್ಬಲಗಳನ್ನು ಮೀರಿದ
‘ಸ್ಮಾರ್ಟ್ ಮೂವ್’ ಅತ್ಯಗತ್ಯವಾಗಿರುತ್ತದೆ.

ಈ ನಡೆಯನ್ನು ಅರಿಯದೇ ಮುನ್ನುಗಿದರೆ ಸರಿಯಾದ ಪೆಟ್ಟು ಬೀಳುವುದರಲ್ಲಿ ಎರಡನೇ ಮಾತಿಲ್ಲ. ಈ ಮಾತಿಗೆ ತಾಜಾ ಉದಾಹರಣೆ ಎನ್ನುವ ರೀತಿಯಲ್ಲಿ ಕರ್ನಾಟಕ ಬಿಜೆಪಿಯಲ್ಲಿನ ಘಟನಾವಳಿ ನಮ್ಮ ಕಣ್ಣ ಮುಂದೆ ನಿಲ್ಲುವುದು ಸ್ಪಷ್ಟ. ಹೌದು, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು
ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅಲಂಕರಿಸಿದ ದಿನದಿಂದ ರಾಜ್ಯ ಬಿಜೆಪಿ ‘ಮನೆಯೊಂದು ನೂರಾರು ಬಾಗಿಲು’ ಎನ್ನುವ ಸ್ಥಿತಿಯಲ್ಲಿದೆ. ಯಾವುದೇ ಪಕ್ಷಕ್ಕೆ ಈ ರೀತಿಯ ಬಣ ರಾಜಕೀಯ ಹೊಸದಲ್ಲ ಎನಿಸಿದರೂ, ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಹಿರಂಗ ಬಣ ಬಡಿದಾಟ ಪಕ್ಷದ ಹಿತದೃಷ್ಠಿಯಿಂದ ಭಾರಿ ಸಮಸ್ಯೆಯನ್ನು ದೀರ್ಘಾವಧಿಗೆ ತಂದಿಡಲಿದೆ ಎನ್ನುವುದು ಸ್ಪಷ್ಟ.

ಸಾಮಾನ್ಯವಾಗಿ ಯಾವುದೇ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯನ್ನು ಒಬ್ಬರು ಅಲಂಕರಿಸಿದ ಬಳಿಕ ಆರಂಭದ ಕೆಲ ದಿನ ಈ ರೀತಿಯ ಅಸಮಾಧಾನ ಗಳು ಸಾಮಾನ್ಯವಾಗಿರುತ್ತದೆ. ಇದು ಬಿಜೆಪಿ, ಕಾಂಗ್ರೆಸ್ ಎಂದಲ್ಲ. ಎಲ್ಲ ಪಕ್ಷದಲ್ಲಿಯೂ ಈ ಅಸಮಾಧಾನಗಳಿರುತ್ತದೆ. ಆದರೆ ದಿನಗಳೆದಂತೆ ಈ ಅಸಮಾಧಾನಗಳನ್ನು ಮೀರಿ ಪಕ್ಷದ ಇಮೇಜ್‌ಗೆ ಸಮಸ್ಯೆಯಾಗದ ರೀತಿಯಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿ ರಾಜ್ಯಾಧ್ಯಕ್ಷರಿಗೆ ಇರುತ್ತದೆ.

ಆದರೆ ಕರ್ನಾಟಕ ಬಿಜೆಪಿಯಲ್ಲಿ ಪರಿಸ್ಥಿತಿ ಭಿನ್ನ ರೀತಿಯಲ್ಲಿದೆ. ವಿಜಯೇಂದ್ರ ಅಧಿಕಾರದ ಗದ್ದುಗೆ ಏರಿದ ಸಮಯದಲ್ಲಿ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲವೇ ಕೆಲವರು ಮಾತ್ರ ವಿರೋಧಿಸಿಕೊಂಡು ಬರುತ್ತಿದ್ದರು. ಆರಂಭಿಕ ಹಂತದಲ್ಲಿಯೇ ಈ ಬಂಡಾಯವನ್ನು ‘ನಿಭಾಯಿಸಿದ್ದರೆ’ ಇಂದು ಈ ಪ್ರಮಾಣದಲ್ಲಿ ಬಹಿರಂಗ ಹೋರಾಟಗಳು ನಡೆಯುತ್ತಿರಲಿಲ್ಲ. ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ಎಲ್ಲವನ್ನೂ ತಂದೆಯ ಮೂಲಕ ಹೇಳಿಸಿ ನಿಭಾಯಿಸುವ ‘ವಿಶ್ವಾಸ’ದಲ್ಲಿದ್ದ ವಿಜಯೇಂದ್ರ ಅವರಿಗೆ ಇದೀಗ ಬಹುದೊಡ್ಡ ಬಂಡಾಯದ ಕಾವು ಮುಟ್ಟಿದೆ. ಈ ಕಾವನ್ನು ಶುರು ಮಾಡಿದ್ದ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸು ಕೊಡಿಸುವಲ್ಲಿ ಯಡಿಯೂರಪ್ಪ, ವಿಜಯೇಂದ್ರ ಹಾಗೂ
ತಂಡದವರು ಯಶಸ್ವಿಯಾಗಿದ್ದಾರೆ. ಈ ಶೋಕಾಸ್ ನೋಟಿಸ್‌ನಿಂದ ಯತ್ನಾಳ್ ಯಾವ ಹೊಡೆತ ಬೀಳುತ್ತದೆ ಎನ್ನುವುದಕ್ಕೆ ಬಿಜೆಪಿಯ ನಾಯಕರಲ್ಲಿಯೇ ಸ್ಪಷ್ಟ ಉತ್ತರವಿಲ್ಲ.

ಆದರೆ ಈ ನೋಟಿಸ್ ಕೊಡಿಸಿದ ಟೈಮಿಂಗ್ ಬಗ್ಗೆ ಈಗ ಹಲವು ಬಗೆಯ ಚರ್ಚೆಗಳು ಶುರುವಾಗಿದೆ. ಹೌದು, ಯತ್ನಾಳ್ ಹಾಗೂ ವಿಜಯೇಂದ್ರ ವಿರುದ್ಧ ಹೋರಾಟ ಶುರುವಾಗಿರುವುದು ಇಂದೇನಲ್ಲ. ಆದರೆ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ಸೇರಿದಂತೆ ಅನೇಕರು ವಿಜಯೇಂದ್ರ ವಿರುದ್ಧ ಕಿಡಿಕಾರುತ್ತಿದ್ದರೂ, ವಿಜಯೇಂದ್ರ ಮೌನವಾಗಿದ್ದರು. ಬಳಿಕ ಇದೀಗ ವರಿಷ್ಠರ
ಮೇಲೆ ಒತ್ತಡ ಹೇರಿ ಯತ್ನಾಳ್ ವಿರುದ್ಧ ನೋಟಿಸ್ ಕೊಡಿಸಿದ್ದಾರೆ. ತಮ್ಮ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ ನೀಡಿಕೊಂಡು ಬರುತ್ತಿರುವುದಕ್ಕೆ ಈ ನೋಟಿಸ್ ಕೊಡಿಸಲಾಗಿದೆ ಎನ್ನುವ ಸಂದೇಶವನ್ನು ಪಾಸ್ ಮಾಡುವುದು ವಿಜಯೇಂದ್ರ ಬಣದ ಲೆಕ್ಕಾಚಾರವಾಗಿದೆ. ಆದರೆ ವಕ್ಫ್ ಬೋರ್ಡ್ ನೀಡುತ್ತಿರುವ ನೋಟಿಸ್‌ಗಳ ಬಗ್ಗೆ‌ ಅಧ್ಯಯನ ಮಾಡಲು, ಜನರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಲು ಯತ್ನಾಳ್ ಬಣ ಜನಾಂದೋಲನ ಯಾತ್ರೆ ಆರಂಭಿಸಿದ ಬಳಿಕ ಈ ನೋಟಿಸ್ ಕೊಡಿಸಲು ಹೆಚ್ಚು ಉತ್ಸಾಹವನ್ನು ವಿಜಯೇಂದ್ರ ತೋರಿರುವುದು
ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ತಾರದೇ ವಕ್ಫ್ ಜನಾಂದೋಲನ ಯಾತ್ರೆಯನ್ನು ಪಕ್ಷದ ಚಿಹ್ನೆಯಲ್ಲಿ ಯತ್ನಾಳ್ ಬಣ ಆರಂಭಿಸಿದ್ದು ತಪ್ಪು ಎನ್ನುವುದು ವಿಜಯೇಂದ್ರ ಬಣದ ವಾದವಾಗಿದೆ. ಆದರೆ ಹಿಂದೂಗಳ ಭೂಮಿಯನ್ನು ಕಬಳಿಸುತ್ತಿರುವ ವಕ್ಫ್ ವಿರುದ್ಧ‌ ಹೋರಾಟ ಮಾಡದೇ ಇನ್ಯಾವುದರ ವಿರುದ್ಧ ಹೋರಾಟಬೇಕು? ಎನ್ನುವುದು ಯತ್ನಾಳ್ ಬೆಂಬಲಿಗರ ವಾದವಾಗಿದೆ. ವಕ್ಫ್ ನೋಟಿಸ್ ವಿಷಯ ಮುನ್ನಲೆಗೆ
ಬರುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷರೇ ಈ ವಿಷಯವನ್ನು‌ ಮುಂದಿಟ್ಟುಕೊಂಡು ಇಂತಹ ಹೋರಾಟ ಮಾಡಬೇಕಿತ್ತು. ಅದರ ಬದಲು ‘ಹೇಳಿಕೆ’ ಹಾಗೂ ‘ಟ್ವೀಟ್’ ಗಳಿಗೆ ತಮ್ಮ ಹೋರಾಟವನ್ನು ಸೀಮಿತಗೊಳಿಸಿಕೊಂಡಿದ್ದರು. ಇದಾದ ಬಳಿಕ ಈ ಆಂದೋಲನವನ್ನು ಘೋಷಿಸುತ್ತಿದ್ದಂತೆ, ರಾಜ್ಯಾಧ್ಯಕ್ಷರಾಗಿ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಯತ್ನಾಳ್ ಅವರು ಆರಂಭಿಸಿರುವ ಹೋರಾಟವನ್ನು ನಾವು ರಾಜ್ಯಾದ್ಯಂತ ವಿಸ್ತರಿಸುತ್ತೇವೆ
ಎಂದಿದ್ದರೆ ‘ದೊಡ್ಡವರಾಗುತ್ತಿದ್ದರು’. ಆದರೆ ಅದನ್ನು ಮಾಡದೇ, ಪಕ್ಷದ ಚಿಹ್ನೆ ಬಳಸಿಕೊಂಡಿದ್ದಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರಿಂದ ಯತ್ನಾಳ್ ವಿರುದ್ಧ ದೂರು ಕೊಡಿಸುವ ಮೂಲಕ, ಪಕ್ಷಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯ ಎನ್ನುವ ಸಂದೇಶವನ್ನು ರವಾನಿಸುವ ಮೂಲಕ ಡ್ಯಾಮೇಜ್ ಮಾಡಿಕೊಂಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಬಿಜೆಪಿಯಲ್ಲಿನ ಬಣ ಬಡಿದಾಟದಿಂದಾಗಿ ರಾಜ್ಯ ಬಿಜೆಪಿ ಆಡಳಿತ ಪಕ್ಷದ ತಪ್ಪನ್ನು ಎತ್ತಿಹಿಡಿಯುವುದಕ್ಕಿಂತ ತಮ್ಮದೇ ಪಕ್ಷದ ವಿರೋಽ ಬಣದ ವಿರುದ್ಧ ರಣತಂತ್ರ ರೂಪಿಸುವಲ್ಲಿಯೇ ಅರ್ಧ ಸಮಯವನ್ನು ಕಳೆದಿತ್ತು. ಇದರೊಂದಿಗೆ ರೇಣುಕಾಚಾರ್ಯರಂತಹ ನಾಯಕರ ಮೂಲಕ ಕೊಡಿಸುವ ಹೇಳಿಕೆಗಳು ವಿಜಯೇಂದ್ರ ಅವರಿಗೆ ಇನ್ನಷ್ಟು ಡ್ಯಾಮೇಜ್ ಮಾಡುವಂತಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬಿಜೆಪಿ ನಾಯಕರಿಗೆ ‘ಸರಣಿ’ ವಿವಾದಗಳ ಪಟ್ಟಿಯನ್ನು ನೀಡಿದರೂ, ಅದನ್ನು ಟೇಕ್ ಆಫ್ ಮಾಡುವಲ್ಲಿ ರಾಜ್ಯ ಬಿಜೆಪಿ ಘಟಕವಾಗಿ ವಿಫಲವಾಗಿತ್ತು. ಮುಡಾ ಹಗರಣದ ವಿರುದ್ಧ ಬೆಂಗಳೂರು-ಮೈಸೂರು ಪಾದಯಾತ್ರೆ ಆರಂಭಿಸಿದ ಬಿಜೆಪಿ ಅದರ ಉದ್ದೇಶವನ್ನೇ ಮರೆತು, ಇಡೀ
ಪಾದಯಾತ್ರೆಯಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡುತ್ತಾ ಸಾಗಿತ್ತು. ಬಿಜೆಪಿ ಘಟಕದಿಂದ ಈ ಪಾದಯಾತ್ರೆಯ ಹೊರತಾಗಿ ಇನ್ಯಾವುದೇ ‘ಹೇಳಿಕೊಳ್ಳುವ’ ಹೋರಾಟಗಳು ಹೊರಬರದಿರುವುದು ಯತ್ನಾಳ್ ಬಣದ ‘ಶಕ್ತಿ’ಯನ್ನು ಒಂದರ್ಥದಲ್ಲಿ ಹೆಚ್ಚಿಸುವಂತೆ ಮಾಡಿದೆ ಎನ್ನುವುದು ಸ್ಪಷ್ಟ.

ಇನ್ನು ರಾಜ್ಯ ಬಿಜೆಪಿಯಲ್ಲಿ ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಿಜಯೇಂದ್ರ ಹಾಗೂ ಯತ್ನಾಳ್ ಮೀರಿದ ಮತ್ತಷ್ಟು ಗುಂಪುಗಳಿವೆ. ಅದರಲ್ಲಿ ಕೆಲವೊಂದಿಷ್ಟು ‘ತಟಸ್ಥ’ರಾಗಿ ಕಾಣಿಸಿಕೊಂಡಿದ್ದರೆ, ಇನ್ನು ಕೆಲವೊಂದಷ್ಟು ಮಂದಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಅಣತಿಯಲ್ಲಿದ್ದಾರೆ. ಈ ಗುಂಪುಗಳೊಂದಿಗೆ ತಲೆಗೊಂದರಂತೆ ಗುಂಪುಗಳ ಮೂಲಕ ಬಿಜೆಪಿ ‘ಒಡೆದ ಮನೆ’ಯಾಗಿದೆ. ಈ ಎಲ್ಲ ಗುಂಪುಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಎನ್ನುವ ಕಾರಣಕ್ಕೆ ವಿಜಯೇಂದ್ರ ಅವರೊಂದಿಗೆ ಕೆಲವೊಂದಿಷ್ಟು ಜನ ಕಾಣಿಸಿಕೊಂಡಿದ್ದಾರೆ. ಆದರೆ ಸ್ಟಾರ್‌ಗಿರಿ ಹೊಂದಿರುವ ಬಹುತೇಕ ರಾಜ್ಯ ಬಿಜೆಪಿ ನಾಯಕರು ಸದ್ಯಕ್ಕೆ ಯಾರ ಪರವಾಗಿಯೂ
ನಿಲ್ಲದೇ ಮೌನವಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಹಾಗೇ ನೋಡಿದರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊಡಿಸಿರುವ ಶೋಕಾಸ್ ನೋಟಿಸ್ ಸಹ ಹಲವು ಗೊಂದಲಗಳಿಗೆ ಕಾರಣವಾಗಿದೆ. ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಸರಣಿ ವಾಗ್ದಾಳಿ ನಡೆಸಿರುವ ಯತ್ನಾಳ್ ವಿರುದ್ಧ ಕ್ರಮವಹಿಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಆದರೆ ವಿಜಯೇಂದ್ರ ದೆಹಲಿಗೆ ಹೋಗಿಬರುತ್ತಿದ್ದಂತೆ ನೋಟಿಸ್ ಕೊಟ್ಟಿರುವ ಹಿಂದಿರುವ ಕರಾಮತ್ತೇನು ಎನ್ನುವುದು ಹಲವರ ಅನುಮಾನವಾಗಿದೆ. ಏಕೆಂದರೆ, ಬಿಜೆಪಿಯ ಆಯಕಟ್ಟಿನಲ್ಲಿರುವ ನಾಯಕರ ಪ್ರಕಾರ, ಯತ್ನಾಳ್ ಹಾಗೂ ಟೀಂ ವಿಜಯೇಂದ್ರ ವಿರುದ್ಧ ಈ ರೀತಿ ಸರಣಿ ಹೋರಾಟ ನಡೆಸುವ ಹಿಂದೆ ದೆಹಲಿ ಬಿಜೆಪಿ ನಾಯಕರ ‘ಬೆಂಬಲ’ವೂ ಇದೆ. ಇದರೊಂದಿಗೆ ಸಂಘ ಪರಿವಾರದಿಂದಲೂ ಪರೋಕ್ಷ ಬೆಂಬಲವಿದೆ. ಇದಕ್ಕಾಗಿಯೇ ಕೆಲ ತಿಂಗಳ ಹಿಂದೆ ಸಂಘ ಪರಿವಾರದ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ
ವಿಜಯೇಂದ್ರ ವಿರುದ್ಧ ಪ್ರತಿಯೊಬ್ಬರ ನಾಯಕನು ಟೀಕಾ ಪ್ರಹಾರ ನಡೆಸಿದರೂ, ಅದಕ್ಕೆ ಬ್ರೇಕ್ ಹಾಕುವ ಪ್ರಯತ್ನವನ್ನು ಆರ್‌ಎಸ್‌ಎಸ್ ಪ್ರಮುಖ ಮಾಡಿರಲಿಲ್ಲ.

ಯತ್ನಾಳ್ ಅವರಿಗೆ ನೋಟಿಸ್ ಕೊಟ್ಟ ಬಳಿಕವೂ ಆ ತಂಡ ಯಾರೊಬ್ಬರಿಂದಲೂ ನೋಟಿಸ್ ಪಡೆದಿರುವುದಕ್ಕೆ ಆತಂಕ ಅಥವಾ ಅಚ್ಚರಿಯ ಮಾತುಗಳು ಬಂದಿಲ್ಲ. ಬದಲಿಗೆ ‘ಪಿಕ್ಚರ್ ಅಭಿ ಬಾಕಿ ಹೇ’ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಅಂದರೆ, ಈ ನೋಟಿಸ್ ಸಹ ಈ ಹಿಂದೆ
ನೀಡಿದ್ದ ನೋಟಿಸ್‌ನಂತೆ ಪೇಪರ್‌ಗೆ ಸೀಮಿತವಾಗುವುದೇ ಎನ್ನುವ ಅನುಮಾನ ಅನೇಕರಲ್ಲಿದೆ.

ಆದರೆ ಈ ಎಲ್ಲವನ್ನು ಮೀರಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ‘ಕೊಡಿಸುವ’ ಮೂಲಕ ವಿಜಯೇಂದ್ರ ಹಾಗೂ ಆಪ್ತರು ಮೇಲುಗೈ ಸಾಧಿಸಿದ್ದೇವೆ ಎನ್ನುವ ‘ವಿಶ್ವಾಸ’ದಲ್ಲಿದ್ದಾರೆ. ಈ ಶೋಕಾಸ್ ನೋಟಿಸ್ ಮೂಲಕ ಪಕ್ಷದ ವರಿಷ್ಠರಿಗೆ ತಮ್ಮ ಅಭಿಪ್ರಾಯ
ಹಾಗೂ ವಿಜಯೇಂದ್ರ ವಿರುದ್ಧ ದೂರಬೇಕಿರುವ ವಿಷಯಗಳನ್ನು ಎಲ್ಲ ‘ಅಧಿಕೃತ’ವಾಗಿ ಪಕ್ಷದ ವರಿಷ್ಠರ ಮುಂದೆ ಮಂಡಿಸುವ ಅವಕಾಶ ಸಿಕ್ಕಿದೆ. ಈ ಅವಕಾಶ ವಿಜಯೇಂದ್ರ ಅವರಿಗೆ ಡ್ಯಾಮೇಜ್ ಆಗುವುದೋ ಅಥವಾ ಯತ್ನಾಳ್ ಬಣಕ್ಕೆ ಹಿನ್ನಡೆಯಾಗುವುದೋ ಎನ್ನುವುದು ಯತ್ನಾಳ್
ನೀಡುವ ಸ್ಪಷ್ಟೀಕರಣದ ಮೇಲೆ ನಿಂತಿದೆ.

ಇದರಿಂದ ಯಾರಿಗೆ ಲಾಭ-ನಷ್ಟವಾಗುತ್ತದೆ ಎನ್ನುವ ಲೆಕ್ಕಾಚಾರಗಳನ್ನು ಮೀರಿ, ಸದ್ಯ ರಾಜ್ಯ ಬಿಜೆಪಿಯಲ್ಲಿ ಅಂತಃಕಲಹದಿಂದಾಗಿ ಆಡಳಿತ ಪಕ್ಷದಲ್ಲಿರುವ ಕಾಂಗ್ರೆಸ್‌ಗೆ ‘ಹಾಸಿಗೆ ಹಾಕಿಕೊಟ್ಟ’ ಹಾಗಾಗಿದೆ. ಪ್ರತಿಪಕ್ಷದಲ್ಲಿರುವವರು ಆಡಳಿತ ಪಕ್ಷದ ಹುಳುಕುಗಳನ್ನು ಕೆದಕುವ ಕೆಲಸಕ್ಕಿಂತ ತಮ್ಮದೇ ಪಕ್ಷದೊಳಗೆ ಬಡಿದಾಟಿಕೊಳ್ಳುವ ಮೂಲಕ, ಆಡಳಿತ ಪಕ್ಷದ ವಿರುದ್ಧ ಕೇಳಿಬಂದಿದ್ದ ಸರಣಿ ವಿವಾದಗಳಿಗೆ ‘ಮೀಡಿಯಾ ಟ್ರಯಲ್
’ನಿಂದ ಮುಕ್ತಿ ನೀಡಿರುವುದಂತೂ ಸತ್ಯ.

ಯಾರಿಗೆ ಸಹಾಯವಾಗಲು ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಸಿಕ್ಕಿದೆ ಎನ್ನುವುದಕ್ಕಿಂತ, ಈ ನೋಟಿಸ್‌ನ ಬಳಿಕವಾದರೂ ಕರ್ನಾಟಕ ಬಿಜೆಪಿಯನ್ನು ಸರಿಪಡಿಸಲು, ಪಾತಾಳಕ್ಕೆ ಬಿದ್ದಿರುವ ಸಂಘಟನೆಯನ್ನು ಮರು ಸಂಘಟಿಸುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ಯಾವ ರೀತಿಯಲ್ಲಿ ಕ್ರಮವಹಿಸಲಿದ್ದಾರೆ ಎನ್ನುವುದೇ ಈಗಿರುವ ಯಕ್ಷಪ್ರಶ್ನೆ.

ಇದನ್ನೂ ಓದಿ: Ranjith H Ashwath Column: ಸೈನಿಕ, ದಳದ ನಡುವೆ ಕಮಲ ಪಡೆ !