Thursday, 15th May 2025

M B Patil: ಹೊಸಕೋಟೆಯಲ್ಲಿ ಟೆಸ್ಕೊ ಗ್ರೂಪ್‌ನ ಹೊಸ ವಿತರಣಾ ಕೇಂದ್ರ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ

ಲಂಡನ್‌ನಲ್ಲಿ ಅಂತರರಾಷ್ಟ್ರೀಯ ರೋಡ್‌ಷೋ; ಇಂಗ್ಲೆಂಡ್‌ನ ಪ್ರಮುಖ ಕಂಪನಿಗಳ ಜೊತೆ ಚರ್ಚೆ

ರಾಜ್ಯದ ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಹೂಡಿಕೆ ಅವಕಾಶ ಅನ್ವೇಷಿಸಲಿರುವ ರೋಲ್ಸ್‌ರಾಯ್ಸ್‌
ಬೆಂಗಳೂರು ಕೇಂದ್ರದ ವಿಸ್ತರಣೆ ಮತ್ತು ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಆರಂಭಿಸಲು ಟೆಸ್ಕೊ ಚಿಂತನೆ; 16,500 ಉದ್ಯೋಗ ಸೃಷ್ಟಿ
ಕೃತಕ ಬುದ್ಧಿಮತ್ತೆ ಆಧಾರಿತ ಶಿಕ್ಷಣ ಪರಿಹಾರಗಳು ಮತ್ತು ಕೌಶಲ ಅಭಿವೃದ್ಧಿ ಉಪಕ್ರಮಗಳೊಂದಿಗೆ ಕರ್ನಾಟಕದಲ್ಲಿ ಬೆಳೆಯಲು ಯೋಜಿಸಿರುವ ಪಿಯರ್ಸನ್

ಲಂಡನ್‌: ʼಬೆಂಗಳೂರಿನಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸಲು ಮತ್ತು ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪಿಸಲು ಟೆಸ್ಕೊ ಉದ್ದೇಶಿಸಿದ್ದು, ಇದರಿಂದ 16,500 ಉದ್ಯೋಗಗಳು ಸೃಷ್ಟಿಯಾಗಲಿವೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.

ಇನ್ವೆಸ್ಟ್‌ ಕರ್ನಾಟಕದ ಅಂತರರಾಷ್ಟ್ರೀಯ ರೋಡ್‌ಷೋದ ಭಾಗವಾಗಿ ಸಚಿವರು ಲಂಡನ್‌ನಲ್ಲಿ ಎರಡನೆ ದಿನ ರೋಲ್ಸ್ ರಾಯ್ಸ್‌, ಮೆಗೆಲ್ಲನ್ ಏರೋಸ್ಪೇಸ್, ಟೆಸ್ಕೊ ಮತ್ತು ಪಿಯರ್ಸನ್‌ ಕಂಪನಿಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದ ನಂತರ ಈ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ತನ್ನ ವಹಿವಾಟು ವಿಸ್ತರಿಸಲು 1,500 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿರುವ ಟೆಸ್ಕೊ ಗ್ರೂಪ್‌, ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪಿಸಲಿದೆ. ಇದರಿಂದ 16,500 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.
ಕರ್ನಾಟಕದ ವೈಮಾಂತರಿಕ್ಷ- ರಕ್ಷಣೆ, ವಾಹನ ತಯಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಸಚಿವರು ಇಂಗ್ಲೆಂಡ್‌ನ ಉನ್ನತ ಜಾಗತಿಕ ಕಂಪನಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯದಲ್ಲಿನ ಸದೃಢ ಮೂಲಸೌಲಭ್ಯ, ಉದ್ಯಮ ಪೂರಕ ವಾತಾವರಣ ಮತ್ತು ʼಕ್ವಿನ್‌ ಸಿಟಿʼ ಯೋಜನೆಗಳಂತಹ ದೂರದೃಷ್ಟಿಯ ಉಪಕ್ರಮಗಳನ್ನು ಪರಿಚಯಿಸಿದ್ದಾರೆ.

ರೋಲ್ಸ್ ರಾಯ್ಸ್ ಗ್ರೂಪ್‌ ಜೊತೆಗಿನ ಸಭೆಯಲ್ಲಿ ಸಚಿವ ಪಾಟೀಲ ಅವರು ಏರೋಸ್ಪೇಸ್ ಮತ್ತು ರಕ್ಷಣೆ ವಲಯದಲ್ಲಿ ಕರ್ನಾಟಕದಲ್ಲಿ ಲಭ್ಯ ಇರುವ ಅವಕಾಶಗಳನ್ನು ಪರಿಚಯಿಸಿದರು. ಇದಕ್ಕೆ ಕಂಪನಿಯ ನಾಯಕತ್ವವು ಮೆಚ್ಚುಗೆ ಸೂಚಿಸಿದೆ.

ಇಂಗ್ಲೆಂಡ್‌ನ ಪ್ರಮುಖ ಶೈಕ್ಷಣಿಕ ಕಂಪನಿಯಾಗಿರುವ ಪಿಯರ್ಸನ್ ಗ್ರೂಪ್, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕಲಿಕೆಯ ಪರಿಹಾರಗಳನ್ನು ಮತ್ತು ಪಾಲುದಾರಿಕೆಗಳನ್ನು ಬಲಪಡಿಸುವ ಮೂಲಕ ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದೆ.

ಕರ್ನಾಟಕಕ್ಕೆ ಸಂಬಂಧಿಸಿದ ಕಂಪನಿಯ ಬದ್ಧತೆಯನ್ನು ಮೆಗೆಲ್ಲನ್ ಏರೊಸ್ಪೇಸ್ ಪುನರುಚ್ಚರಿಸಿದೆ. ಜಾಗತಿಕ ವೈಮಾಂತರಿಕ್ಷ ಕೇಂದ್ರವಾಗಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿರುವ ಕಂಪನಿಯ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಅವರು ಉದ್ಯಮಿಗಳ ಜೊತೆಗಿನ ಸಮಾಲೋಚನೆಗಳಲ್ಲಿ ಭಾಗವಹಿಸಿದ್ದರು.