Sunday, 11th May 2025

Canada Row: ಕೆನಡಾದಲ್ಲಿ ಹಿಂದೂಗಳ ಶಕ್ತಿ ಪ್ರದರ್ಶನ; ಖಲಿಸ್ತಾನಿಗಳ ಅಟ್ಟಹಾಸ ಖಂಡಿಸಿ ಬೃಹತ್‌ ರ‍್ಯಾಲಿ

canada row

ಒಟ್ಟಾವಾ: ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರದ ಮೇಲೆ ಖಾಲಿಸ್ತಾನಿ(Khalistani Separatist)ಗಳ ದಾಳಿ(Canada Row) ಖಂಡಿಸಿ ಸಾವಿರಾರು ಕೆನಡಾದ ಹಿಂದೂಗಳು(Attack on Hindu temple) ಒಗ್ಗಟ್ಟಿನಿಂದ ಮೆರವಣಿಗೆ ನಡೆಸಿದ್ದಾರೆ. ಸೋಮವಾರ ರಾತ್ರಿ ನಡೆದ ಮೆರವಣಿಗೆಯನ್ನು ಉತ್ತರ ಅಮೆರಿಕದಲ್ಲಿ ಹಿಂದೂಗಳ ಒಕ್ಕೂಟ (CoHNA) ಆಯೋಜಿಸಿತ್ತು.

“ಹಿಂದೂ ದೇವಾಲಯಗಳ ಮೇಲೆ ಹೆಚ್ಚುತ್ತಿರುವ ಭೀಕರ ದಾಳಿಗಳ ವಿರುದ್ಧ ಪ್ರತಿಭಟಿಸಲು ಬ್ರಾಂಪ್ಟನ್‌ನಲ್ಲಿ ಸಾವಿರಕ್ಕೂ ಹೆಚ್ಚು ಕೆನಡಾದ ಹಿಂದೂಗಳು ಜಮಾಯಿಸಿದ್ದಾರೆ. ಹಬ್ಬದ ಬೆನ್ನಲ್ಲೇ, ಕೆನಡಾದ ಹಿಂದೂ ದೇವಾಲಯಗಳು ಮತ್ತು ಭಕ್ತರ ಮೇಲೆ ಖಲಿಸ್ತಾನಿಗಳಿ ದಾಳಿ ನಡೆಸಿದ್ದಾರೆ. ಈ ಹಿಂದೂಫೋಬಿಯಾವನ್ನು ನಿಲ್ಲಿಸುವಂತೆ ನಾವು ಕೆನಡಾವನ್ನು ಕೇಳುತ್ತೇವೆ. ” ಎಂದು ಹಿಂದೂ ವಕೀಲರ ಗುಂಪು ಟ್ವೀಟ್ ಮಾಡಿದೆ.

ಇನ್ನು ಈ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದವರು ಕೆನಡಾ ಮತ್ತು ಭಾರತದ ಧ್ವಜಗಳನ್ನು ಹಿಡಿದು, ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ್ದಾರೆ. ಮತ್ತೊಂದೆಡೆ ಖಲಿಸ್ತಾನ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಸುಮಾರು 20 ವರ್ಷಗಳಿಂದ ಕೆನಡಾದಲ್ಲಿ ಹಿಂದೂಗಳು ಸತತವಾಗಿ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಒಬ್ಬ ಪ್ರತಿಭಟನಾಕಾರ ಹೇಳಿದ್ದಾರೆ.

ಕೆನಡಾ(Canada)ದ ಬಾಪ್ಟನ್‌ನಲ್ಲಿರುವ ಹಿಂದೂ ದೇಗುಲದ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ದಾಳಿ ಮಾಡಿದ್ದು, ಅಲ್ಲಿದ್ದ ಹಿಂದೂ ಭ‍‍ಕ್ತರ ಮೇಲೆ ಹಲ್ಲೆ ನಡೆಸಿದ್ದರು. ಇನ್ನು ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಭಾನುವಾರ ಈ ಘಟನೆ ನಡೆದಿದ್ದು, ಇಲ್ಲಿ ಪೂಜೆಗೆ ಬಂದಿದ್ದ ಜನರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ವಿಡಿಯೋದಲ್ಲಿ ಕೆಲವರು ಹಿಂದೂ ಸಭಾ ಮಂದಿರದ ಹೊರಗೆ ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಕೆನಡಾದಲ್ಲಿರುವ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಅವರು ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಸೋಮವಾರ ಬ್ರಾಂಪ್ಟನ್ ದೇವಾಲಯದಲ್ಲಿ ಹಿಂದೂ ಭಕ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದು, ದೇಶದಲ್ಲಿ ಹಿಂಸಾಚಾರವನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಭಾನುವಾರ, ಹಿಂದೂ ಸಭಾ ಮಂದಿರದಲ್ಲಿ ಭಕ್ತರ ಗುಂಪನ್ನು ಗುರಿಯಾಗಿಸಿಕೊಂಡು ಖಲಿಸ್ತಾನಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಖಂಡನೆ

ಕೆನಡಾದಲ್ಲಿ ಹಿಂದೂ ದೇಗುಲಗಳ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಖಂಡನೆ ವ್ಯಕ್ತಪಡಿಸಿದ್ದು, ರಾಜತಾಂತ್ರಿಕ ಅಧಿಕಾರಿಗಳನ್ನು ಬೆದರಿಸುವ ಹೇಡಿತನದ ಪ್ರಯತ್ನ ಎಂದು ಕರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi: ಕೆನಡಾಗೆ ಪ್ರಧಾನಿ ಮೋದಿ ಎಚ್ಚರಿಕೆ; ಹಿಂದೂಗಳ ಮೇಲೆ ಖಲಿಸ್ತಾನಿಗಳ ದಾಳಿ ಬಳಿಕ ಫಸ್ಟ್‌ ರಿಯಾಕ್ಷನ್‌