Thursday, 15th May 2025

K S Eshwarappa: ಇದು ರಾಜಕೀಯ ಸಂಘಟನೆ ಯಲ್ಲ, ಉದ್ದೇಶವೂ ಇಲ್ಲ: ಈಶ್ವರಪ್ಪ ಸ್ಪಷ್ಟನೆ

ಬ್ರಿಗೇಡ್ ಸ್ಥಾಪನೆ ಮುನ್ನ ಚಿಂತನಾ ಸಮಾವೇಶ

ಶಿವಮೊಗ್ಗ: ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿಆ.20 ರಂದು ಉತ್ತರ ಕರ್ನಾಟಕದ ಸುಮಾರು ಎರಡೂವರೆ ಸಾವಿರ ಕಾರ್ಯಕರ್ತರ ಚಿಂತನ -ಮಂಥನ ಸಮಾವೇಶ ನಡೆಸಲು ಆ ಭಾಗದ ಸಾಧು ಸಂತರು ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪಕ್ಷಾತೀತ, ಜಾತ್ಯತೀತವಾಗಿರುತ್ತದೆ. ನಾಯಕತ್ವವನ್ನು ಆ ಭಾಗದ ಸಾಧು ಸಂತರೇ ವಹಿಸಲಿದ್ದಾರೆ. ಇಲ್ಲಿ ಈ ಬ್ರಿಗೇಡ್ ಗೆ ಯಾವ ಹೆಸರು ಘೋಷಣೆ ಮಾಡಬೇಕು. ಹಾಗೂ ಇದರ ಮುಂದಿನ ಕಾರ್ಯಕ್ರಮಗಳೇನು ಎಂದು ಆ ಸಮಾವೇಶದಲ್ಲಿ ಘೋಷಣೆ ಮಾಡಲಾಗುವುದು ಎಂದರು.
ಈಗಾಗಲೇ, ರಾಜ್ಯದ ಎಲ್ಲಾ ಭಾಗಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಂದುಳಿದ ವರ್ಗದ ಸಂಘಟನೆ ಅಗತ್ಯ ಎಂಬುದನ್ನು ಜನ ಮನಗಂಡಿದ್ದಾರೆ.

ಅನೇಕರು ಈಗಾಗಲೇ ನಾವು ಬರುತ್ತೇವೆ ಎಂದು ಸಂಪರ್ಕಿಸುತ್ತಿದ್ದಾರೆ. ಆದರೆ, ಅಲ್ಲಿ ಕೇವಲ ಎರಡೂವರೆ ಸಾವಿರ ಜನರಿಗೆ ಮಾತ್ರ ಅವಕಾಶವಿದ್ದು, ಪ್ರಮುಖರು ಮಾತ್ರ ಬರಲು ಅವಕಾಶವಿದ್ದು, ಹಿಂದುಳಿದ ವರ್ಗದ ನಾಯಕರು ಬರುವ ಮುನ್ನ ವ್ಯವಸ್ಥೆಯ ದೃಷ್ಟಿಯಿಂದ ಪೋನ್ ಮೂಲಕ ತಮ್ಮನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.
ಆಗಮಿಸಿದವರ ಸಲಹೆಯನ್ನೂ ಕೂಡ ತೆಗೆದುಕೊಳ್ಳುತ್ತೇವೆ. ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ಹಿಂದೆ ನಾನು ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದಾಗ ಕೂಡ ಅದೇ ರೀತಿ ಬೆಂಬಲ ವ್ಯಕ್ತವಾಗಿತ್ತು. ಪಕ್ಷದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಅದನ್ನು ನಿಲ್ಲಿಸಿದ್ದೆ. ಆದರೆ, ನಾನು ತಪ್ಪು ಮಾಡಿದೆ ಎಂದು ಈಗ ಅನಿಸುತ್ತಿದೆ ಎಂದರು.

ಕೇಂದ್ರದಲ್ಲಿ ಜಂಟಿ ಸಮಿತಿ ಅಡಿಯಲ್ಲಿ ವಕ್ಪ್ ಆಸ್ತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ವಕ್ಪ್ ಆಸ್ತಿಯ ಬಗ್ಗೆ ಅವರು ಮಾಹಿತಿ ಸಂಗ್ರಹಿಸಿ ಬಡ ಮುಸ್ಲಿಂ ವ್ಯಕ್ತಿಗಳಿಗೆ ಸೇರಬೇಕಾದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಕೆಲವೇ ಕೆಲವು ಮುಸ್ಲಿಂ ಮುಖಂಡರ ಪಾಲಾಗಿದೆ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದರು. ಆಗ ಕಾಂಗ್ರೆಸ್ ಮುಖಂಡರು ಮತ್ತು ಆಸ್ತಿ ಲೂಟಿ ಮಾಡಿದ ಪ್ರಬಲ ನಾಯಕರು ಬಲವಾಗಿ ವಿರೋಧಿಸಿದ್ದರು. ಮತ್ತು ಅನ್ವರ್ ಮಾಣಿಪ್ಪಾಡಿ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು.

ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಪರಿಷತ್ ನಲ್ಲಿ ಹಲವು ಬಾರಿ ಈ ವರದಿ ಬಹಿರಂಗಪಡಿಸಲು ಒತ್ತಾಯಿ ಸಿದ್ದೆ. ಆಗಿನ ಸಭಾಪತಿಗಳಾದ ಡಿ.ಹೆಚ್. ಶಂಕರಮೂರ್ತಿ ಅವರು ತಮಗೂ ಜೀವ ಬೆದರಿಕೆ ಇದ್ದರೂ ಲೆಕ್ಕಿಸದೇ ಆ ವರದಿಯನ್ನು ಟೇಬಲ್ ಗೆ ತಂದಿದ್ದರು. ಈಗ ಅದರು ಕೇಂದ್ರದ ಸಂಸದೀಯ ಮಂಡಳಿಯಲ್ಲಿ ಕೂಡ ಚರ್ಚೆಗೆ ಬಂದಿದೆ. ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್ ಮೊದಲಾದ ನಾಯಕರ ಹೆಸರೂ ಇದ. ಕಾಂಗ್ರೆಸ್ ಪಕ್ಷ ಬಡ ಮುಸ್ಲಿಮರ ಆಸ್ತಿ ರಕ್ಷಣೆಗಾಗಿ ಈ ವರದಿಗೆ ಅಡ್ಡಿಪಡಿಸಬಾರದು. ಹಾಗೂ ಡಿ.ಹೆಚ್. ಶಂಕರ ಮೂರ್ತಿ ಮತ್ತು ಅನ್ವರ್ ಮಾಣಿಪ್ಪಾಡಿ ಅವರಿಗೆ ಭದ್ರತೆ ಒದಗಿಸಬೇಕು ಎಂದರು. ಸಾವಿರಾರು ಕೋಟಿ ಆಸ್ತಿ ಕೆಲವೇ ವ್ಯಕ್ತಿಗಳ ಪಾಲಾಗಲು ಬಿಡಬಾರದು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಈ ವರದಿ ಬಗ್ಗೆ ಗಮನಹರಿಸಲಿ ಎಂದರು.

ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಮುಸಲ್ಮಾನರ ಮೇಲಿರುವ ಪ್ರಕರಣವನ್ನು ರಾಜ್ಯ ಸರ್ಕಾರ ರದ್ದು ಮಾಡಬಾರ ದಿತ್ತು. ಮುಸ್ಲಿಮರು ಅಂದಾಕ್ಷಣ ಅವರು ಏನೂ ಮಾಡಿದರೂ ಕ್ಷಮಿಸಬೇಕು ಎಂದರೆ ಹೇಗೆ? ಪೊಲೀಸ್ ಠಾಣೆಗೆ ನುಗ್ಗಿ ಕಲ್ಲು ತೂರಾಟ ನಡೆಸಿ ಪೊಲೀಸರ ಮೇಲೆಯೇ ದಂಗೆ ಎದ್ದ 155 ಗೂಂಡಾಗಳ ಮೇಲೆ ಹಾಕಿದ ಕೇಸ್ ರದ್ದು ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಹೀಗೇ ಆದರೆ ರಾಜ್ಯ ಗೂಂಡಾ ರಾಜ್ಯವಾಗಲಿದ್ದು, ಬಾಂಗ್ಲಾ ದೇಶದ ಪರಿಸ್ಥಿತಿ ಬರುತ್ತದೆ ಎಂದರು.

ಸಚಿವ ನಾಗೇಂದ್ರ ಅವರಿಗೆ ಜಾಮೀನು ದೊರೆತಾಕ್ಷಣ ಅವರು ನಿರಪರಾಧಿ ಎಂದಲ್ಲ. ಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆ ಖಂಡಿತ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರ ಭಕ್ತರ ಬಳಗದ ಪ್ರಮುಖರಾದ ಇ. ವಿಶ್ವಾಸ್, ರಮೇಶ್ ಸರ್ಜಿಗಾರ, ಕುಬೇರಪ್ಪ, ಜಗದೀಶ್, ಮೋಹನ್ ಜಾಧವ್, ಶಂಕರ್ ನಾಯಕ್, ಬಾಲು, ಸುನಿಲ್ ಇತರರು ಇದ್ದರು.

ಸಿಎಂ ದೈವಭಕ್ತಿ ಮುಂದುವರೆಯಲಿ
ಮುಖ್ಯಮಂತ್ರಿ ಗಳು ಇತ್ತೀಚೆಗೆ ಭಾರಿ ದೈವಭಕ್ತರಾಗಿದ್ದಾರೆ. ಸಿದ್ಧರಾಮಯ್ಯನವರು ಇದೇ ಭಕ್ತಿಯನ್ನು ಮುಂದುವರೆ ಸಲಿ. ಈಗಲಾದರೂ ಅವರಿಗೆ ದೇವರ ಮೇಲೆ ಭಕ್ತಿ ಬಂದಿರುವುದು ನನಗೆ ಸಂತಸ ತಂದಿದೆ ಎಂದರು. ದಲಿತರ ಚಾಂಪಿಯನ್ ಎಂದು ಹೇಳುವ ಅವರು 9 ವರ್ಷದ ಕೆಳಗೆ ಕಾಂತರಾಜ್ ವರದಿ ಜಾರಿಗೆ ತರಲು ನಾನು ಹಲವು ಬಾರಿ ಒತ್ತಾಯಿಸಿದ್ದರೂ ಇದುವರೆಗೂ ಜಾರಿಗೆ ತಂದಿಲ್ಲ. ಈಗ ಮುಡಾ ಹಗರಣ ಬಯಲಿಗೆ ಬಂದ ಮೇಲೆ ವರದಿ ಬಗ್ಗೆ ಮಾತನಾಡುತ್ತಿದ್ದಾರೆ. ಅ.18ರಂದು ಜಾರಿ ಮಾಡಿಯೇ ಸಿದ್ದ ಎಂದವರು ಈಗ 25ಕ್ಕೆ ಮುಂದೂಡಿದ್ದಾರೆ. ಇದರಲ್ಲೇನೋ ಕುತಂತ್ರವಿದೆ ಎಂದರು. ಬ್ರಿಗೇಡ್ ಸ್ಥಾಪನೆ ಹಿಂದೆ ರಾಜಕೀಯ ಉದ್ದೇಶವಿಲ್ಲ. ಅದು ರಾಜಕೀಯ ಸಂಘಟನೆಯೂ ಅಲ್ಲ, ಬ್ರಹ್ಮ ಬಂದರೂ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ಸಾಧುಸಂತರೇ ಇದರ ನಾಯಕತ್ವ ವಹಿಸುತ್ತಾರೆ ಎಂದರು.

ಇದನ್ನೂ ಓದಿ: Police SP Kushal Chaukse: ಧಾರ್ಮಿಕ ಆಚರಣೆಗಳು ಕೋಮು ಸೌಹಾರ್ದತೆ ಪಸರಿಸುವಂತಿರಲಿ: ಎಸ್ಪಿ ಕುಶಾಲ್ ಚೌಕ್ಸೆ ಅಭಿಮತ