Wednesday, 14th May 2025

Delhi Shootout: ಜಿಮ್‌ ಓನರ್‌ ಶೂಟೌಟ್‌ ಕೇಸ್‌; ಪ್ರಮುಖ ಶೂಟರ್‌ ಕಾಲಿಗೆ ಪೊಲೀಸರಿಂದ ಗುಂಡೇಟು

dehli shootout

ನವದೆಹಲಿ: ಕೆಲವು ದಿನಗಳ ಹಿಂದೆ ದೆಹಲಿ(Delhi Shootout)ಯಲ್ಲಿ ಜಿಮ್ ಮಾಲೀಕನೊಬ್ಬನ ಮೇಲೆ ಗುಂಡು ಹಾರಿಸಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಬಂಧಿತ ಆರೋಪಿ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌(Bishnoi Gang)ಗೆ ಸೇರಿದವನು ಎನ್ನಲಾಗಿದೆ. ಇನ್ನು ಬಂಧಿತನನ್ನು ಮಧುರ್ ಅಲಿಯಾಸ್ ಮೋಟಾ ಅರ್ಮಾನ್ ಎಂದು ಗುರುತಿಸಲಾಗಿದೆ.

ದಕ್ಷಿಣ ದೆಹಲಿಯ ಉನ್ನತ ಮಟ್ಟದ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಜಿಮ್ ಮಾಲೀಕ ನಾದಿರ್ ಶಾ ಹತ್ಯೆ ಮೇಲೆ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು, ಇದೀಗ ಈ ಪ್ರಕರಣದಲ್ಲಿ ಪ್ರಮುಖ ಶೂಟರ್ ಆಗಿದ್ದ ಮಧುರ್ ಅಲಿಯಾಸ್ ಮೋಟಾ ಅರ್ಮಾನ್ ಶನಿವಾರ ಉತ್ತರ ದೆಹಲಿಯ ನರೇಲಾ ಇಂಡಸ್ಟ್ರೀಸ್ ಪ್ರದೇಶದಲ್ಲಿ ಅರೆಸ್ಟ್‌ ಮಾಡಿದ್ದಾರೆ. ಈತ ಅಲ್ಲಿ ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರ ತಂಡ ರೇಡ್‌ ಮಾಡಿದ್ದಾರೆ. ಅರೆಸ್ಟ್‌ ವೇಳೆ ಆರೋಪಿ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದು, ಪೊಲೀಸರು ಸ್ವಯಂ ರಕ್ಷಣೆಗಾಗಿ ಆತನ ಕಾಲಿಗೆ ಶೂಟ್‌ ಮಾಡಿದ್ದಾರೆ. ಇನ್ನು ಈತ ಲಾರೆನ್ಸ್ ಬಿಷ್ಣೋಯ್ ಮತ್ತು ಹಾಶಿಮ್ ಬಾಬಾ ಗ್ಯಾಂಗ್‌ಗಳೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಧುರ್‌ಗೆ ಕೆಲವು ಗುಂಡುಗಳು ತಾಗಿವೆ. ಸ್ಥಳದಿಂದ ಒಂದು ಪಿಸ್ತೂಲ್ ಮತ್ತು 12 ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶೂಟೌಟ್‌ನಲ್ಲಿ, ಮಧುರ್ ಅವರ ಬಲ ಮೊಣಕಾಲು ಮತ್ತು ಎಡ ಪಾದದ ಬುಲೆಟ್ ತಗುಲಿದೆ. ಇನ್ನು ಆತ ಹಾರಿಸಿದ ಗುಂಡು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದ ಸಬ್ ಇನ್ಸ್‌ಪೆಕ್ಟರ್ ಆದೇಶ್ ಕುಮಾರ್‌ಗೆ ತಗುಲಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಘಟನೆ?

ಕೆಲವು ದಿನಗಳ ಹಿಂದೆಯಷ್ಟೇ ಜಿಮ್‌ ಮಾಲೀಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ವರದಿಯಾಗಿತ್ತು. ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ 35 ವರ್ಷದ ಜಿಮ್ ಮಾಲೀಕನನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭೀಕರ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಫ್ಘಾನಿಸ್ತಾನ ಮೂಲದ ಮತ್ತು ಸಿಆರ್ ಪಾರ್ಕ್‌ನಲ್ಲಿ ನೆಲೆಸಿದ್ದ ನಾದಿರ್ ಶಾ ಎಂಬಾತ ಮೃತ ದುರ್ದೈವಿಯಾಗಿದ್ದು, ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ಆತ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ರಾತ್ರಿ 10:45 ರ ಸುಮಾರಿಗೆ ಗುಂಡಿನ ದಾಳಿಯ ಬಗ್ಗೆ ಪೊಲೀಸರಿಗೆ ಕರೆ ಬಂದಿತು. ತಕ್ಷಣ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ರಕ್ತದಮಡುವಿನಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಶಾನನ್ನು ಪೊಲೀಸರು ಕಂಡಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿಗೆ ತಲುಪುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ.

ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗಾಳಿಯಲ್ಲಿ ಹಲವಾರು ಸುತ್ತಿನ ಗುಂಡು ಹಾರಿಸಿದ್ದು, ಸ್ಥಳದಲ್ಲಿ ಖಾಲಿಯಾದ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಸಂಭಾವ್ಯ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅಂಕಿತ್ ಚೌಹಾಣ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Drug Bust : 2000 ಕೋಟಿ ರೂಪಾಯಿ ಮೌಲ್ಯದ 200 ಕೆ.ಜಿ ಕೊಕೇನ್‌ ವಶ