Saturday, 10th May 2025

Commitment towards Success: ನಿರಂತರ ಪ್ರಯತ್ನದಿಂದ ಗೆಲುವು ಸಾಧ್ಯ -ಸಿಇಓ 

ತುಮಕೂರು: ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಏಕಾಗ್ರತೆ, ನಿರಂತರ ಪ್ರಯತ್ನದ ಜೊತೆಗೆ ಹಠದ ಹಸಿವು ಅಗತ್ಯವೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಜಿಲ್ಲೆಯ ಕ್ರೀಡಾ ವಸತಿ ಶಾಲಾ ಕ್ರೀಡಾಪಟುಗಳಿಗಾಗಿ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ  ಹಮ್ಮಿ ಕೊಂಡಿದ್ದ ಕ್ರೀಡಾ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಪ್ರಯತ್ನದಿಂದ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ಹೇಳಿದರಲ್ಲದೆ, ವಿಶ್ವದಲ್ಲಿರುವ ಸುಮಾರು 900 ಕೋಟಿ ಜನಸಂಖ್ಯೆಯಲ್ಲಿ ಶೇ.೧೫ಕ್ಕೂ  ಹೆಚ್ಚಿನ ಜನಸಂಖ್ಯೆಯುಳ್ಳ ಭಾರತ ದೇಶವು ಉತ್ತಮ ಕ್ರೀಡಾ ಸಾಧಕರನ್ನು ಹೊಂದಿ ರುವ ರಾಷ್ಟ್ರವೆನಿಸಿಕೊಂಡಿದೆ. ಕ್ರೀಡಾ ಸಾಧಕರನ್ನು ಆದರ್ಶವಾಗಿರಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳ ಬೇಕು ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್. ರೋಹಿತ್ ಗಂಗಾಧರ್ ಮಾತನಾಡಿ, 92 ಕ್ರೀಡಾಪಟುಗಳಿಗೆ ಕಿಟ್ ವಿತರಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ದೇಶಕ್ಕೆ ಕೀರ್ತಿ ತರಬೇಕು  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಮ್ನ್ಯಾಸ್ಟಿಕ್ ತರಬೇತಿದಾರ ಸುಧೀರ್ ದೇವದಾಸ್, ಕಬಡ್ಡಿ ತರಬೇತಿದಾರ ಮೊಹಮದ್ ಇಸ್ಮಾಯಿಲ್, ಅಥ್ಲೆಟಿಕ್ ತರಬೇತಿದಾರ ಶಿವ ಪ್ರಸಾದ್, ಜಿಲ್ಲಾ ಕ್ರೀಡಾ ಶಾಲಾ ವಸತಿ ನಿಲಯ ಕ್ಷೇಮ ಪಾಲಕರಾದ ಎಂ. ಶಿಲ್ಪಾ ಶ್ರೀ  ಹಾಗೂ ಮಂಜುಳಮ್ಮ, ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್, ವಸತಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.

Leave a Reply

Your email address will not be published. Required fields are marked *