ರಾಯಚೂರು : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ಶ್ರೀ ಮಠದಲ್ಲಿ ಅದ್ದೂರಿ ಚಾಲನೆ ದೊರೆಯಿತು.
ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಬೃಂದಾವನ ಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಂಚಾಲಮ್ಮಗೆ ನಮಿಸಿ ಪ್ರಾಕಾರದ ಮುಖ್ಯದ್ವಾರದ ಮುಂದೆ ಸಕಲ ಧಾರ್ಮಿಕ ವಿಧಿ ವಿಧಾನದ ಮೂಲಕ ಗೋಪೂಜೆ, ಅಶ್ವಪೂಜೆ,ಒಂಟೆಗಳ ಪೂಜೆ ನೆರವೇರಿಸಿ ಭಗವಾ ಧ್ವಜಾರೋಹಣ ನೆರವೇರಿಸಿ ಸಪ್ತರಾತ್ರೋತ್ಸವಕ್ಕೆ ಮುನ್ನುಡಿ ಹಾಕಿದರು.
ಬಳಿಕ ವೇದಿಕೆ ಸಭಾ ಭವನದಲ್ಲಿ ರಾಯರ ಪ್ರತಿಮೆಗೆ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ನಂತರ ಶ್ರೀಗಳು ವಿವಿಧ ಸೇವಾ ಕಚೇರಿಗಳಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿ ರಾಯರ ಭಕ್ತರಿಗೆ ತೊಂದರೆ ಯಾಗದಂತೆ ಸೇವೆ ಸಲ್ಲಿಸುವಂತೆ ಆಶೀರ್ವದಿಸಿದರು.
ಝಗಮಗಿಸುತ್ತಿರುವ ಮಂತ್ರಾಲಯ : ಆರಾಧನಾ ಮಹೋತ್ಸವದ ಅಂಗವಾಗಿ ಮಂತ್ರಾಲಯ ದೀಪಾ ಲಂಕಾರದಿಂದ ಝಗಮಗಿಸುತ್ತಿದೆ.
ವಿವಿಧೆಡೆಯಿಂದ ಆಗಮಿಸುವ ಭಕ್ತ ವೃಂದಕ್ಕೆ ಮಂತ್ರಾಲಯದ ಮೂರು ದಿಕ್ಕುಗಳಲ್ಲಿ ಸ್ವಾಗತಿಸುವ ಕಮಾನುಗಳ ಬ್ಯಾನರ್ಗಳು ಮತ್ತು ರಾಜಬೀದಿ ಸೇರಿದಂತೆ ಮಠದ ಪ್ರಾಕಾರದ ಸುತ್ತ ಹಾಗೂ ಮಠದ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಬಣ್ಣ ಬಣ್ಣದ ದೀಪಾಲಂಕರ ಕಣ್ಮನ ಸೆಳೆಯುತ್ತಿದೆ.
ಮತ್ತೊಂದೆಡೆ ಮಠದ ಪ್ರಾಕಾರದ ಸುತ್ತಲು ತಳಿರು ತೋರಣ ಕಟ್ಟಿ ಹೂವಿನ ಭಾಗಶಃ ಪೂರ್ಣಗೊಂಡಿದ್ದರೂ ಇನ್ನೂ ಕೆಲವೆಡೆ ಹೂವಿನ ಅಲಂಕಾರ ಕೊನೆಯ ಹಂತದ ಬಣ್ಣ ಬಳಿಯುವ ಕಾರ್ಯ ಮತ್ತು ಬೃಂದಾವನ ಇರುವ ಪ್ರಾಕಾರದ ಅಂಚುಗಳಿಗೆ ಚಿನ್ನದ ಲೇಪನದ ಕೆಲಸವೂ ಭರದಿಂದ ನಡೆಯುತ್ತಿದೆ. ಅಲಂಕಾರ ಈಗಾಗಲೇ ಮಠದಲ್ಲಿ ಸೇವೆ ಕೈಗೊಳ್ಳಲು ನೂರಾರು ಸ್ವಯಂ ಸೇವಕರ ಭಕ್ತರ ದಂಡು ಸಹ ಆಗಮಿಸಿದ್ದು ತುಂಬಿ ಹರಿಯು ತ್ತಿರುವ ತುಂಗಭದ್ರಾ ನದಿಯ ನಿನಾದದ ನಡುವೆ ವೇದ ಮಂತ್ರಗಳೊಂದಿಗೆ ಚಂಡೆ ಮದ್ದಲೆ ಸೇರಿದಂತೆ ಮಂಗಳ ವಾದ್ಯಗಳ ನಿನಾದದಲ್ಲಿ ಚಿನ್ನ, ಬೆಳ್ಳಿ, ನವರತ್ನ ಖಚಿತ ರಥಗಳನ್ನು ಶೃಂಗರಿಸಿ ಸಿದ್ದಪಡಿಸಿ ಪ್ರಹ್ಲಾದ ರಾಜರ ಉತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ.
ಇಂದು ಸಂಜೆಯೇ ತಿರುಪತಿ ತಿರುಮಲ ದೇವಸ್ಥಾನದಿಂದ ರಾಯರ ಬೃಂದಾವನಕ್ಕೆ ಮಧ್ಯಾರಾಧನೆ ದಿನ ಅಲಂಕರಿಸಲು ಆಗಮಿಸಿದ ಶೇಷ ವಸ್ತ್ರವನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸಿದ್ದು ಈ ಬಾರಿ ವಿಶೇಷವಾಗಿತ್ತು. ಪ್ರತಿವರ್ಷ ಮಧ್ಯಾರಾಧನೆ ದಿನ ಬೆಳಿಗ್ಗೆ ತಿರುಪತಿ ತಿರುಮಲ ದೇವಸ್ಥಾನದಿಂದ ಆಗಮಿಸುವ ಶೇಷ ವಸ್ತ್ರ ಈ ಬಾರಿ ಮುಂಚೆಯೇ ಆಗಮಿಸಿದ್ದಕ್ಕೆ ಯಾವುದೇ ವಿಶೇಷ ಕಾರಣವಿಲ್ಲ.ಮಧ್ಯಾರಾಧನೆ ದಿನ ಹೆಚ್ಚಿನ ಕೆಲಸಗಳು ಮತ್ತು ನೂಕುನುಗ್ಗಲು ಇರುವುದರಿಂದ ಮುಂಚೆಯೇ ಶೇಷ ವಸ್ತ್ರವನ್ನು ಟಿಟಿಡಿ ಕಳುಹಿಸಿದೆ ಎಂದು ಮಠದ ಮೂಲಗಳು ತಿಳಿಸಿವೆ.
ನಂತರ ಪ್ರಹ್ಲಾದರಾಜರ ಪಲ್ಲಕ್ಕಿ ಉತ್ಸವ ಮತ್ತು ಧಾನ್ಯ ಪೂಜೆ ನಡೆಯಿತು. ಇದಾದ ಬಳಿಕ ಬೃಂದಾವನದ ಪ್ರಾಂಗಣದಲ್ಲಿ ಪ್ರಹ್ಲಾದರಾಯರ ಚಿನ್ನದ ರಥೋತ್ಸವ ಜರುಗಿತು. ಮಠದ ಮುಂಭಾಗದಲ್ಲಿರುವ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳಲ್ಲಿ ದಾಸವಾಣಿ, ನೃತ್ಯ ರೂಪಕಗಳು ಜರುಗಿದವು