Sunday, 11th May 2025

ಎರಡನೇ ಟಿ20 ಪಂದ್ಯ ಇಂದು: ಭಾರತ ಗೆದ್ದರೆ ಸರಣಿ ಕೈವಶ

ವೀ ಮುಂಬೈ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಎದುರಿನ ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಗೆಲ್ಲುವ ಛಲದಲ್ಲಿದೆ.

ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದರುವ ಆತಿಥೇಯ ತಂಡವು ಈಗ ಭರ್ತಿ ಆತ್ಮವಿಶ್ವಾಸದಲ್ಲಿದೆ. ಏಕದಿನ ಸರಣಿಯಲ್ಲಿ ಸೋತಿದ್ದ ಮುಯ್ಯಿ ತೀರಿಸಿಕೊಳ್ಳಲು ಹರ್ಮನ್ ಬಳಗ ತುದಿಗಾಲಿನಲ್ಲಿ ನಿಂತಿದೆ.

ಯುವ ಆಟಗಾರ್ತಿ ತಿತಾಸ್ ಸಾಧು ಅವರ ಅಮೋಘ ಬೌಲಿಂಗ್‌ನಿಂದಾಗಿ ಭಾರತಕ್ಕೆ ಜಯ ಒಲಿದಿತ್ತು. ಶ್ರೇಯಾಂಕಾ ಪಾಟೀಲ, ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್ ಅವರೂ ಪರಿಣಾಮಕಾರಿ ಬೌಲಿಂಗ್ ಮಾಡಿದ್ದರು. ಬ್ಯಾಟರ್‌ಗಳಾದ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರು ಅರ್ಧಶತಕ ಗಳಿಸಿದ್ದರು. ಅದೇ ಲಯವನ್ನು ಮುಂದುವರಿಸಿದರೆ ಆಸ್ಟ್ರೇಲಿಯಾ ಎದುರು ಜಯಿಸುವುದು ಸರಳವಾಗಲಿದೆ.

ಆರು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಿರುಗೇಟು ನೀಡಲು ಕಾದಿದೆ. ಅಲಿಸಾ ಹೀಲಿ ನಾಯಕತ್ವದ ತಂಡದಲ್ಲಿ ಅನುಭವಿ ಆಟಗಾರ್ತಿಯರು ಇದ್ದಾರೆ. ಅವರು ಕೂಡ ಕಠಿಣ ಪೈಪೋಟಿಯೊಡ್ಡುವ ಛಲದಲ್ಲಿದ್ದಾರೆ.

Leave a Reply

Your email address will not be published. Required fields are marked *