
ಕಳೆದ 15 ದಿನಗಳಿಂದ ನಡೆದ ಪ್ರಚಾರ ಕಾರ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲು, ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಆನೇಕಲ್ ನಾರಾಯಣಸ್ವಾಮಿ, ಮಾಜಿ ಸಚಿವ ಡಿ.ಎಸ್. ವೀರಯ್ಯ ಮತ್ತಿತರರು ಪಾಲ್ಗೊಂಡು ಜ್ಯೋತಿಗಣೇಶ್ ಪರ ಮತ ಯಾಚಿಸಿದರು.
ಬೃಹತ್ ಸಮಾವೇಶ ನಡೆಸಿದ ಪ್ರಧಾನಿ, ಜಿಲ್ಲೆಯ ಎಲ್ಲ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರೆ, ಬಿ.ಎಸ್. ಯಡಿಯೂರಪ್ಪ ಅವರು ತುಮಕೂರು ವೀರಶೈವ-ಲಿಂಗಾಯಿತ ಮುಖಂಡರು, ಕಾರ್ಯಕರ್ತರ ಪ್ರತ್ಯೇಕ ಸಭೆ ನಡೆಸಿ, ಸಮಾಜದ ಬೆಂಬಲ ಕೋರಿದರು. ಸ್ವತಃ ನಾನೇ ಅಭ್ಯರ್ಥಿ ಎಂದು ಭಾವಿಸಿ ಮತ ನೀಡುವಂತೆ ಮನವಿ ಮಾಡಿದರು. ತೆರೆದ ವಾಹನದಲ್ಲಿ ರ್ಯಾಲಿ ನಡೆಸಿದರು.
“ಜ್ಯೋತಿಗಣೇಶ್ ಅವರು ಸ್ಮಾರ್ಟ್ಸಿಟಿಯನ್ನು ರಾಜ್ಯದಲ್ಲೇ ನಂಬರ್ 1 ಮಾಡಿದ್ದಾರೆ. ಸ್ಮಾರ್ಟ್ಸಿಟಿ ಯೋಜನೆಗಳ ಅನುಷ್ಠಾನದ ಹಿಂದೆ ಅವರ ಶ್ರಮ ದೊಡ್ಡದಿದೆ. ಸ್ಮಾರ್ಟ್ಸಿಟಿ ಹೊರತಾಗಿಯೂ ನೂರಾರು ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸುಶಿಕ್ಷಿತ, ಸಜ್ಜನರಾದ ಜ್ಯೋತಿಗಣೇಶ್ ಅವರನ್ನು ಭಾರೀ ಅಂತರದಲ್ಲಿ ಗೆಲ್ಲಿಸಬೇಕು. ಇದು ನನ್ನ ಗೌರವದ ಪ್ರಶ್ನೆ,’’ ಎಂದರು. ವಿಜಯೋತ್ಸವಕ್ಕೆ ಬರುತ್ತೇನೆ ಎಂದು ಹೇಳಿದರು.
ಜ್ಯೋತಿಗಣೇಶ್ ಪರ ಸುದ್ದಿಗೋಷ್ಠಿ ನಡೆಸಿದ ತುಮಕೂರು ನಗರದ ವೀರಶೈವ ಸಮಾಜದ ಮುಖಂಡರು, ಸಮಾಜ ಯಡಿಯೂ ರಪ್ಪ ಹಾಗೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದೆ. ಜ್ಯೋತಿಗಣೇಶ್ ಅವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸ ಬೇಕೆಂದು ಕೋರಿದರು. ನಾನಾ ಸಮುದಾಯಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ, ಬೆಂಬಲ ಸೂಚಿಸಿದವು.