Wednesday, 14th May 2025

ಜಾಗಿಂಗ್‌ ಮಾಡುತ್ತಿದ್ದ ಟೆಕ್‌ ಕಂಪನಿ ಸಿಇಒಗೆ ಕಾರು ಡಿಕ್ಕಿ

ಮುಂಬೈ: ಮುಂಬೈನ ವರ್ಲಿಯಲ್ಲಿ ಭಾನುವಾರ ಜಾಗಿಂಗ್‌ ಮಾಡುತ್ತಿದ್ದ ಟೆಕ್‌ ಕಂಪನಿಯೊಂದರ ಸಿಇಒಗೆ ವೇಗವಾಗಿ ಸಂಚರಿಸುತ್ತಿದ್ದ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಸಿಇಒ ಅನ್ನು ರಾಜಲಕ್ಷ್ಮಿ ರಾಮಕೃಷ್ಣನ್‌ ಎಂದು ಗುರುತಿಸಲಾಗಿದೆ. ಕಾರಿನ ಚಾಲಕ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಾಜಲಕ್ಷ್ಮಿ ಅವರು ಟೆಕ್ನಾಲಜಿ ಕಂಪನಿಯೊಂದರ ಸಿಇಒ ಆಗಿದ್ದರು. ಫಿಟ್ನೆಸ್‌ ಬಗ್ಗೆ ಕಾಳಜಿ ಹೊಂದಿದ್ದು, ಮುಂಬಯಿನ ಶಿವಾಜಿ ಪಾರ್ಕ್‌ನ ಜಾಗರ್ಸ್‌ ಗ್ರೂಪ್‌ನಲ್ಲಿ ಸಕ್ರಿಯರಾಗಿದ್ದರು. ಭಾನುವಾರ ಬೆಳಗ್ಗೆ ವರ್ಲಿ ಡೇರಿ ಸಮೀಪ ಅಪಘಾತ ಸಂಭವಿಸಿದೆ.

ಪೊಲೀಸರ ಪ್ರಕಾರ ಚಾಲಕ 23 ವರ್ಷ ವಯಸ್ಸಿನ ಸುಮೇರ್‌ ಮರ್ಚೆಂಟ್‌ ಆಗಿದ್ದು, ಬಂಧಿಸ ಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

ಮೂಲಗಳ ಪ್ರಕಾರ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಹೊಡೆದು ಬಳಿಕ ಮಹಿಳೆಗೆ ಡಿಕ್ಕಿಯಾಗಿದೆ. ರಾಜ ಲಕ್ಷ್ಮಿಯವರ ತಲೆಗೆ ತೀವ್ರ ಗಾಯವಾಗಿತ್ತು.